ಅಶೋಕ ಚಕ್ರ

ನೋಡದೊ ಸ್ವಾತಂತ್ರ್‍ಯಾಕಾಶದಲಿ
ಹಾರುತ್ತಿದೆ ನವ ರಾಷ್ಟ್ರಧ್ವಜವು!
ಹಾರಲಿ! ಏರಲಿ! ಈ ಹೊಸ ಬಾವುಟ!
ಚಿರ ಬಾಳಲಿ ನವ ಭಾರತ ಕೂಟ!

ಹಿಂದೂ ಮುಸ್ಲಿಮ ಸಿಕ್ಕರು ಒಂದು
ಹಿಂದೆ ಇಂದು ಮುಂದೆಂದೆಂದೂ-
ಇಂತು ಸಾರುತಿದೆ ಈ ಹೊಸ ಬಾವುಟ:
ಗೆಲ್ಲಲಿ ಎಲ್ಲರು ಒಂದೆನುವೀ ದಿಟ!

ಬಾರ ಬಾರ ಹರಿಕಾರ ಸಮೀರ
ತಾರ ತಾರ ಬಾವುಟಕ್ಕೆ ವಿಹಾರ
ತೋರ ತೋರ ಬಾವುಟದಾಕಾರ:
ಹಾಡಲಿ ಹರಸಲಿ ಲೋಕವಪಾರ!

ನಿಲ್ಗೆ ಚಂದ್ರತಾರಂಬರಮೀ ಧ್ವಜ
ಪುಣ್ಯಭೂಮಿಯಲಿ ನವ ಕಲ್ಪ ಕುಜ!
ತುಂಬಿ ಬಿಡುತಿರಲಿ ಫಲಪುಷ್ಪವ್ರಜ,
ಆಶ್ರಯ ಹೊಂದಲಿ ಸರ್ವಪ್ರಜಾ.

ಹಸುರು ಬಿಳಿಪು ಕೇಸರಿಗಳು ಕೂಡಿದ
ಮೂಬಣ್ಣದ ನಡುವೆಯಲದೊ ನೋಡು:
‘ಅಶೋಕ ಚಕ್ರ’ವು ಮೆರೆಯುತಿದೆ,
ಶಾಂತಿಯ ಯುಗವನು ತೆರೆಯುತಿದೆ.

ಅಂದು ಅಶೋಕನು ಧರಿಸಿದ ಚಕ್ರ:
ಯುದ್ಧವ ನಿಲಿಸಿದ ಶಾಂತಿಯ ಚಕ್ರ;
ಶಾಂತಿ ಪುಷ್ಟಿ ತುಷ್ಟಿಗಳನು ತುಂಬುವ,
ಭಗವಾನ್ ಬುದ್ಧನ ಧರ್ಮದ ಚಕ್ರ.

ಹಿಂದೆ ಕೃಷ್ಣನೇ ತೋರಿದ ದಾರಿ-
ಗಾಂಧಿ ಮಹಾತ್ಮರು ಎತ್ತಿಹಿಡಿದ ಗುರಿ-
ಸತ್ಯ ಅಹಿಂಸೆ ದಾನ ಧರ್ಮ ದಯೆ:
ಶೋಕವ ಹರಿಸುವ ‘ಅಶೋಕ’ ಚಕ್ರ.

ಯುದ್ಧವನೆಸಗದೆ, ಯಾರನು ಕೊಲ್ಲದೆ,
ಕೊಲ್ಲಬಂದವರ ರಕ್ತವ ಚೆಲ್ಲದೆ,
ಆಳರಸರ ಹೃದಯವ ಮಾರ್ಪಡಿಸಿದ
ದಿವ್ಯಮಂತ್ರವಿದು: ಅಶೋಕ ಚಕ್ರ.

ನಾಡಿನ ದಾಸ್ಯದ ಶೋಕವ ಕಳೆದು
ಹೆರರಿಗೆ ಶೋಕವ ತರುವುದನುಳಿದು
ಶಾಂತಿಯ ಬೆಳಸುವ ಧ್ಯೇಯವ ತಳೆದು
ತಿರುಗುತ ಬೆಳಗುತಲಿಹುದೀ ಚಕ್ರ.

ಭಾರತೀಯ ಸಂಸ್ಕೃತಿಗಿದೆ ಗುರುತು:
ಭೇದಭಾವಗಳನೆಲ್ಲರು ಮರೆತು
ಕೂಡಿ ಬಾಳೆ ಶೋಕವೆ ಹೊರತು:
ಆ ಬಾಳ ತರಲಿ ಈ ಶುಭ ಚಕ್ರ!

ಸತ್ಯ ಅಹಿಂಸೆಗಳಡಿಗಲ್ ಮೇಲೆ
ಸಮತೆಯ ಸೌಧವ ಕಟ್ಟಲು ನಾಳೆ
ಜನತೆಯ ಶೋಕವು ನೀಗುವುದಾಗಳೆ:
ಅದರ ಮುಂಗುರುಹು ಅಶೋಕ ಚಕ್ರ!

ಭಾರತ ಮಾತೆಗೆ ಕಿರೀಟವಿಟ್ಟು
ನಾಡಿಗೆ ನಲ್‌ನಗು ಮುಖವನು ಕೊಟ್ಟು
ವಿಶ್ವಕೆ ಶಾಂತಿಯ ಹರಕೆಯನಿಟ್ಟು
ತಿಗುತ್ತಿರಲಿ ಸನಾತನ ಚಕ್ರ!

ಎನಿತು ಸೂಳು ತಿರುಗಿದುದೀ ಚಕ್ರ,
ಎನಿತು ಸೂಳು ನಿಂತುದೊ ಈ ಚಕ್ರ;
ನಿಲ್ಲದೆ ತಿರುಗಲಿ ಅಶೋಕ ಚಕ್ರ,
ಗೆಲ್ಲಲಿ ಜಗವನೆ ಧರ್ಮದ ಚಕ್ರ!

ಶ್ರೀ ಕೃಷ್ಣ ಬುದ್ಧ ಅಶೋಕ ಗಾಂಧೀ
ಪ್ರಭೃತಿಪ್ರವರ್ತಿತ ಚಕ್ರಕ್ಕೆ ನಮೋ
ಧರ್ಮದ ಚಕ್ರಕೆ ನಮೋ ನಮೋ
ಅಶೋಕ ಚಕ್ರಕೆ ನಮೋ ನಮೋ

ಅಶೋಕ ಚಕ್ರಾಂಕಿತ ಧ್ವಜಕೆ ನಮೋ
ಭಾರತ ಮಾತೆಗೆ ನಮೋ ನಮೋ
ಭಾರತ ಜನತೆಗೆ ತೇಜವನೆರೆದು
ಸಲಹುವ ದೇವಗೆ ನಮೋ ನಮೋ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಂಪೆಯಲ್ಲಿ ಮತ್ತೆ
Next post ಇಳಾ – ೧೬

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

cheap jordans|wholesale air max|wholesale jordans|wholesale jewelry|wholesale jerseys